ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ರಾಜ್ಯದ ಜಲವಿವಾದ ನಷ್ಟ ಜನತೆಗೆ - ಲಾಭ ಯಾರಿಗೆ?

ಬೆಂಗಳೂರು: ರಾಜ್ಯದ ಜಲವಿವಾದ ನಷ್ಟ ಜನತೆಗೆ - ಲಾಭ ಯಾರಿಗೆ?

Sun, 10 Jan 2010 14:50:00  Office Staff   S.O. News Service
ಬೆಂಗಳೂರು,ಜ,10:ಕೃಷ್ಣ - ಕಾವೇರಿ, ಮಹದಾಯಿ ಸೇರಿ ಹಲವಾರು ಅಂತರ್ ರಾಜ್ಯ ಜಲವಿವಾದಗಳಲ್ಲಿ ನ್ಯಾಯಾಲಯ, ನ್ಯಾಯಮಂಡಳಿಗಳಿಂದ ರಾಜ್ಯಕ್ಕೆ ಎಷ್ಟರ ಮಟ್ಟಿಗೆ ನ್ಯಾಯ ಸಿಕ್ಕಿದೆಯೋ ಗೊತ್ತಿಲ್ಲ. ಆದರೆ ರಾಜ್ಯವನ್ನು ಪ್ರತಿನಿಧಿಸುವ ವಕೀಲರಿಗೆ ಮಾತ್ರ ರಾಜ್ಯದ ಬೊಕ್ಕಸದಿಂದ ಸಾರ್ವಜನಿಕರ ಹಣವನ್ನು ನೀರಿನಂತೆ ವೆಚ್ಚಮಾಡುತ್ತಿರುವ ಸಂಗತಿ ಮಾತ್ರ ದಾಖಲೆಗಳ ಸಮೇತ ಬಯಲಾಗಿದೆ. 

ನ್ಯಾಯಾಲಯ, ನ್ಯಾಯಮಂಡಳಿಗಳಲ್ಲಿ ವಾದಮಂಡಿಸುವುದಷ್ಟೇ ಅಲ್ಲದೇ  ಸರ್ಕಾರ ಕರೆಯುವ ಸಮಾಲೋಚನಾ ಸಭೆ, ಸರ್ವಪಕ್ಷಗಳ ಮುಖಂಡರ ಸಭೆಗಳಲ್ಲಿ ಪಾಲ್ಗೊಳ್ಳಲು ಸಹಾ ವಕೀಲರಿಗೆ ಪ್ರತಿಬಾರಿಯೂ ಲಕ್ಷ ಗಟ್ಟಲೆ ಹಣ ಪಾವತಿ ಮಾಡಲಾಗುತ್ತಿದೆ. ಪತ್ರಿಕೆಗೆ ಲಭ್ಯವಾಗಿರುವ ದಾಖಲೆಗಳೇ ಈ ಕುರಿತು ಮಾತನಾಡುತ್ತವೆ. 

ರಾಜ್ಯವನ್ನು ಪ್ರತಿನಿಧಿಸುವ ವಕೀಲರಲ್ಲಿ ಅತಿ ಹೆಚ್ಚು ಶುಲ್ಕ ಪಡೆಯುವವರಲ್ಲಿ ಅನಿಲ್ ಬಿ. ದಿವಾನ್ ಅಗ್ರಗಣ್ಯರು. ಒಂದು ನಿಮಿಷವಿರಲಿ, ಒಂದು ಗಂಟೆಯಿರಲಿ, ಒಂದು ದಿನವಿರಲಿ. ನ್ಯಾಯಾಲಯಕ್ಕೆ ಹಾಜರಾದರೆ ಅವರಿಗೆ ೩.೫ ಲಕ್ಷ ರೂ ಸಂಭಾವನೆ ನೀಡಲಾಗುತ್ತದೆ. 

ನಂತರದ ಸ್ಧಾನದಲ್ಲಿ ಎಫ್.ಎಸ್. ನಾರಿಮನ್ ಅವರಿದ್ದು, ಅವರಿಗೆ ೧.೫ ಲಕ್ಷ ರೂ ಪಾವತಿಮಾಡಲಾಗುತ್ತಿದೆ. ಇವರಲ್ಲದೆ ಮೋಹನ್ ಖಾತರಕಿ, ಎಸ್.ಎಸ್. ಜವಳಿ, ಬ್ರಜೇಷ್ ಕಾಳಪ್ಪ ಹೀಗೆ ಹಲವು ವಕೀಲರು ಸಂಭಾವನೆ ಪಡೆಯುತ್ತಿದ್ದಾರೆ. 

ವಕೀಲರ ಜೊತೆಗೆ ಕಾರ್ಯನಿರ್ವಹಿಸುವ ಕ್ಲರ್ಕ್‌ಗಳು ಕೂಡ ಯಾರಿಗೇನು ಕಡಿಮೆಯಿಲ್ಲ ಎನ್ನುವಂತೆ ಗರಿಷ್ಠ ಸಂಭಾವನೆ ಪಡೆಯುತ್ತಿದ್ದಾರೆ. ಇದಕ್ಕೊಂದು ತಾಜಾ ಉದಾಹರಣೆ ಎಂದರೆ ಕೃಷ್ಣಾ ನದಿ ನೀರಿನ ವಿವಾದಲ್ಲಿ ಕಾರ್ಯನಿರ್ವಹಿಸುವ ಅನಿಲ್ ದಿವಾನ್ ಅವರ ಕೈಕೆಳಗೆ ಕಾರ್ಯನಿರ್ವಹಿಸುವ ಜಿತೇಂದ್ರ ಕುಮಾರ್ ಎಂಬುವರು ಕಳೆದ ವರ್ಷದ ಏಪ್ರಿಲ್‌ನಿಂದ ಡಿಸೆಂಬರ್ ೧೦ ರ ವರೆವಿಗೆ ೧.೪೪ ಕೋಟಿ ರೂ ಸಂಭಾವನೆ ಪಡೆದಿದ್ದಾರೆ ಎಂದರೆ ಅದೇನು ಅಚ್ಚರಿಯಲ್ಲ. ಇದೇ ರೀತಿ ಎಫ್.ಎಸ್. ನಾರಿಮನ್ ಅವರೊಂದಿಗೆ ಕಾರ್ಯನಿರ್ವಹಿಸುವ ವಿನೋದ್ ಕೆ. ಆನಂದ್ ಎಂಬ ಗುಮಾಸ್ತ ೮,೮೮ ಲಕ್ಷ ರೂ ಹಣವನ್ನು ಜೇಬಿಗಿಳಿಸಿದ್ದಾರೆ. 

ಇಲ್ಲಿ ಗಮನಿಸಬೇಕಾದ ಅಂಶ ಹಾಗೂ ಇಲ್ಲಿ ನೀಡುತ್ತಿರುವ  ಅಂಕಿ‌ಅಂಶಗಳಲ್ಲಿ ಪ್ರಮುಖವಾಗಿ ಕಾವೇರಿ ನದಿ ನೀರಿನ ವಿವಾದದಲ್ಲಿ ೧೯೯೦ ರಿಂದ ಹಣ ಪಾವತಿ ಮಾಡಲಾಗುತ್ತಿದೆ. ಕೃಷ್ಣ ಕೊಳ್ಳದ ಏ ಸ್ಕೀಂ ವಿವಾದ ಪೂರ್ಣಗೊಂಡಿದ್ದು, ಬಿ. ಸ್ಕೀಂಗಾಗಿ ಕಾರ್ಯನಿರ್ವಹಿಸುತ್ತಿರುವ ವಕೀಲರಿಗೆ ೨೦೦೫ - ೦೬ ನೇ ಸಾಲಿನಿಂದ ಪಾವತಿಸಿರುವ ಮೊತ್ತವನ್ನು ಮಾತ್ರ ಇಲ್ಲಿ ದಾಖಲಿಸಲಾಗಿದೆ. 

ಕಳೆದ ೧೯೯೨ ರಿಂದ ರಾಜ್ಯದ ಪರವಾಗಿ ವಾದಿಸುತ್ತಿರುವ ಅನಿಲ್ ದಿವಾನ್ ಈವರೆವಿಗೆ ೧೬.೨೩ ಕೋಟಿ ರೂ ಸಂಭಾವನೆ ಪಡೆದಿದ್ದಾರೆ. ಕಾವೇರಿ ನದಿ ನೀರಿನ ವಿವಾದದಲ್ಲಿ ೯೨ ರಿಂದ ವಾದಿಸುತ್ತಿರುವ ಅವರಿಗೆ ೧೦.೪೯ ಕೋಟಿ ರೂಗೂ ಹೆಚ್ಚು ಹಣ ಪಾವತಿಸಲಾಗಿದೆ. ಇದಲ್ಲದೇ ಕೃಷ್ಣ ಕೊಳ್ಳದ ನೀರಾವರಿ ಯೋಜನೆಗಳ ಕುರಿತು ವಾದ ಮಂಡಿಸಲು ಇದೇ ವಕೀಲರಿಗೆ ೨೦೦೫ ರಿಂದೀಚೆಗೆ ೫.೭೪ ಕೋಟಿ ರೂ ಪಾವತಿಮಾಡಲಾಗಿದೆ. 

ಇವರ ನಂತರದ ಸ್ಧಾನದಲ್ಲಿ ಎಸ್.ಎಸ್. ಜವಳಿ ಅವರಿದ್ದು, ಅವರು ೧೯೯೦ ರಿಂದಲೂ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ಅವರಿಗೆ ೬.೬೩ ಕೋಟಿ ರೂಪಾಯಿಗೂ ಹೆಚ್ಚು ಹಣ ಪಾವತಿ ಮಾಡಲಾಗಿದೆ. ಕಾವೇರಿ ನದಿ ನೀರಿನ ವಿವಾದದಲ್ಲಿ ಅವರಿಗೆ ೩.೯೨ ಕೋಟಿ ರೂ, ಕೃಷ್ಣಾ ನದಿ ಕೊಳ್ಳದ ವಿಚಾರದಲ್ಲಿ ೨.೬೦ ಕೋಟಿ ರೂಗೂ ಹೆಚ್ಚು ಹಣ ವೆಚ್ಚಮಾಡಲಾಗಿದೆ. 

ಎಫ್.ಎಸ್. ನಾರಿಮನ್ ಅವರೂ ಕೂಡ ೧೯೯೦ ರಿಂದ ರಾಜ್ಯದ ಪರವಾಗಿ ವಾದಿಸುತ್ತಿದ್ದು, ಕಾವೇರಿ ಕೊಳ್ಳದ ನದಿ ನಿರಿನ ವಿಚಾರದಲ್ಲಿ ೨.೩೮ ಕೋಟಿ ರೂ ಪಾವತಿಮಾಡಲಾಗಿದೆ. ಕೃಷ್ಣಾಕೊಳ್ಳದಲ್ಲಿ ೨.೫೧ ಕೋಟಿ ರೂ, ಮಹದಾಯಿ ನದಿ ನೀರಿನ ವಿಚಾರದಲ್ಲಿ ವಾದಿಸಿದ್ದಕ್ಕಾಗಿ ಕಳೆದ ಎರಡು ವರ್ಷಗಳಿಂದ ೨೫.೯೫ ಲಕ್ಷ ರೂ ನೀಡಲಾಗಿದೆ. 

ಇನ್ನು ಮೋಹನ್ ಕಾತರಕಿ ಅವರು ಎಲ್ಲಾ ನದಿ ನೀರಿನ ವಿಚಾರದಲ್ಲಿ ರಾಜ್ಯದ ಪರವಾಗಿ ಕೆಲಸ ಮಾಡಿರುವುದಕ್ಕೆ ಇಲ್ಲಿಯವರೆವಿಗೆ ೪.೯೨ ಕೋಟಿ ರೂ ಸಂಭಾವನೆ ಪಡೆದಿದ್ದಾರೆ. ಕಾವೇರಿ ವಿಚಾರವಾಗಿ ೩.೦೯ ಕೋಟಿ ರೂ, ಕೃಷ್ಣಾ ಕೊಳ್ಳದಲ್ಲಿ ೧.೬೪ ಕೋಟಿ ರೂ, ಮಹದಾಯಿ ವಿಚಾರದಲ್ಲಿ ೧೮ ಲಕ್ಷ ರೂ ಸಂಭಾವನೆ ಪಡೆದಿದ್ದಾರೆ. 

ಇದೇ ರೀತಿ ಬಸವರಾಜ ಪ್ರಭು ಪಾಟೀಲ್, ಗುರುದತ್, ಬ್ರಿಜೇಷ್ ಕಾಳಪ್ಪ, ಎಸ್.ಸಿ. ಶರ್ಮಾ, ಆರ್.ಎಸ್.ರವಿ, ಆರ್.ಎಸ್. ಪಪ್ಪು, ವೈ.ಎಸ್.ಚಿತಾಲೆ, ಎ.ವೈ.ಚಿತಾಲೆಯಂತಹ ಘಟಾನುಘಟಿ ವಕೀಲರು ಕೂಡ ಯಾರಿಗೂ ಕಡಿಮೆ ಇಲ್ಲದಂತೆ ಸಂಭಾವನೆ ಪಡೆದಿದ್ದಾರೆ. 

ಇವರ ಜೊತೆಗೆ ರಾಜ್ಯದ ಅಡ್ವೋಕೇಟ್ ಜನರಲ್‌ಗಳು ಕೂಡ ರಾಜ್ಯದ ಯಾವುದೇ ವಿಚಾರಕ್ಕು ಕೂಡ ಸಲಹೆ ನೀಡಲು ಸಂಭಾವನೆ ಪಡೆಯುತ್ತಾರೆ. ಕಾಲ ಕಾಲಕ್ಕೆ ಅವರ ಸಂಭಾವನೆಯ ಮೊತ್ತ ಕೂಡ ಹೆಚ್ಚಾಗುತ್ತಲೇ ಇದೆ. ಪ್ರತಿಯೊಂದು ಸಭೆ, ಸಮಾರಂಭಕ್ಕೂ ಕೂಡ ಅವರು ವೇತನ ಪೆಡಯುವುದು ಸಾಮಾನ್ಯ ಸಂಗತಿಯಾಗಿದೆ. ಕಳೆದ ೨೦೦೫ - ೦೬ ನೇ ಸಾಲಿನಿಂದ ಇಲ್ಲಿಯವರೆವಿಗೆ ಅಡ್ವೋಕೆಟ್ ಜನರಲ್‌ಗಳಿಗೆ ಸರ್ಕಾರದ ವತಿಯಿಂದ ೧.೦೩ ಕೋಟಿ ರೂ ಹಣ ಪಾವತಿಸಲಾಗಿದೆ. ಕಾವೇರಿ ನದಿ ಕೊಳ್ಳದ ವಿಚಾರದಲ್ಲಿ ೧.೩೭ ಕೋಟಿ ರೂ ನೀಡಲಾಗಿದೆ. 

ಕಾವೇರಿ ನದಿ ನೀರಿನ ಕಾನೂನು ಹೋರಾಟಕ್ಕಾಗಿ ೧೯೯೦ ರಿಂದ ಇಲ್ಲಿಯವರೆವಿಗೆ ರಾಜ್ಯ ಸರ್ಕಾರ ೨೪.೦೬ ಕೋಟಿ ರೂ ವ್ಯಯಿಸಿದೆ. ಅಡ್ವೋಕೇಟ್ ಜನರಲ್‌ಗಳಿಗೆ ನೀಡಿದ ಮೊತ್ತವನ್ನು ಹೊರತುಪಡಿಸಿ. ಇನ್ನು ಕೃಷ್ಣಾ ನದಿ ಕೊಳ್ಳದ ನೀರಾವರಿ ಹೋರಾಟಕ್ಕಾಗಿ ೨೦೦೫ - ೦೬ ರಿಂದ ಇಲ್ಲಿಯವರೆವಿಗೆ ೧೯.೫೩ ಕೋಟಿ ರೂ ವೆಚ್ಚಮಾಡಲಾಗಿದೆ. ಇತ್ತೀಚೆಗಷ್ಟೇ ವಿವಾದಕ್ಕೀಡಾದ ಮಹದಾಯಿ ನದಿ ನೀರು ವಿವಾದಕ್ಕಾಗಿ ೬೦.೫೭ ಲಕ್ಷ ರೂ ವೆಚ್ಚಮಾಡಲಾಗಿದೆ. 

ವಕೀಲರಿಗೆ ಶುಲ್ಕ ಅಭಾದಿತ: ವಕೀಲರಿಗೆ ಸಂಭಾವನೆಯನ್ನು ರಾಜ್ಯದ ನೀರಾವರಿ ಬಜೆಟ್‌ನಿಂದ ಮಂಜೂರು ಮಾಡಲಾಗುತ್ತದೆ. ಒಮ್ಮೆ ಸಭೆಯಲ್ಲಿ ಪಾಲ್ಗೊಂಡು ಅವರು ಬಿಲ್ ಕಳುಹಿಸಿದರೆ ಮರುದಿನವೇ ಅವರಿಗೆ ಹಣ ಸಂದಾಯವಾಗುತ್ತದೆ. 

ಹಣ ಪಾವತಿ ಮಾಡುವಾಗ ತೆರಿಗೆಯನ್ನು ಕಡಿತಗೊಳಿಸಿ ಉಳಿದ ಮೊತ್ತಕ್ಕೆ ಚಕ್ ನೀಡಲಾಗುತ್ತದೆ. ವಕೀಲರಿಗೆ ವಿಮಾನಗಳಲ್ಲಿ ವೈ. ದರ್ಜೆಯ ಪ್ರಯಾಣ ಸೌಲಭ್ಯ ಕಲ್ಪಿಸಲಾಗುತ್ತದೆ. ಟಿ.ಎ. ಡಿ.ಎ ಸೇರಿದಂತೆ ಎಲ್ಲಾ ರೀತಿಯ ಸವಲತ್ತುಗಳು ಅವರಿಗೆ ಇರುತ್ತದೆ. 

ಇನ್ನೂ ವಿಚಿತ್ರವೆಂದರೆ ಅವರ ಜೊತೆ ಕಾರ್ಯನಿರ್ವಹಿಸುವ ಗುಮಾಸ್ತರಿಗೆ ಅವರು ಪಡೆಯುವ ವೇತನದಲ್ಲಿ ಶೇ ೧೦ ರಷ್ಟು ಶುಲ್ಕ ನೀಡಲಾಗುತ್ತದೆ. ಒಂದು ನಿಮಿಷವಾಗಲಿ. ಒಂದು ಗಂಟೆಯಾಗಲಿ. ಸರ್ಕಾರದ ಕೆಲಸಕ್ಕೆ ಅವರು ಬಂದರೆ ಅವರಿಗೆ ನಿಗದಿತ ಮೊತ್ತ ಪಾವತಿಮಾಡಲೇಬೇಕು. 

ನ್ಯಾಯಮಂಡಳಿಗಳಲ್ಲಿ ದೈನಂದಿನ ವಾದ ಮಂಡನೆಯ ಸಂದರ್ಭದಲ್ಲೂ ಕೂಡ ಯಾವುದೇ ರೀತಿಯ ವಿನಾಯಿತಿ ಇಲ್ಲ. ಅವರಿಗೆ ಎಲ್ಲಾ ರೀತಿಯ ಸವಲತ್ತುಗಳು ದೊರೆಯುತ್ತವೆ. 
 
 

Share: